ಉಡುಪಿ: ಜಿಲ್ಲೆಯಲ್ಲಿ ದಾಖಲಾದ ಹಲವು ಅಪರಾಧ ಪ್ರಕರಣಗಳನ್ನು ಅತ್ಯಂತ ಯಶಸ್ವಿಯಾಗಿ ಮತ್ತು ತ್ವರಿತವಾಗಿ ಭೇದಿಸಿದ ಶಿರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಜಿಲ್ಲಾ ಮಟ್ಟದ ಗೌರವ ಲಭಿಸಿದೆ. ಆಗಸ್ಟ್ 28ರಂದು ಬೆಳಿಗ್ಗೆ ನಡೆದ ಉಡುಪಿ ಜಿಲ್ಲಾ ಕವಾಯತು (ಪರೇಡ್) ಕಾರ್ಯಕ್ರಮದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ 5 ಪೊಲೀಸ್ ಸಿಬ್ಬಂದಿಗೆ ‘ಶ್ಲಾಘನಾ ಪತ್ರ’ ನೀಡಿ ಪ್ರಶಂಸಿಸಲಾಯಿತು. ಪ್ರಶಸ್ತಿ ಪುರಸ್ಕೃತ ಅಧಿಕಾರಿಗಳು ಮತ್ತು ಸಿಬ್ಬಂದಿ: ಮಂಜುನಾಥ್ ಮರಬದ – ಪಿಎಸ್ಐ, ಶಿರ್ವ ಠಾಣೆ,ಲೋಹಿತ್ ಕುಮಾರ್ – ಪಿಎಸ್ಐ,ಮಂಜುನಾಥ್ ಅಡಿಗ – ಹೆಡ್ ಕಾನ್ಸ್ಟೇಬಲ್, ಕಿರಣ್ – ಕಾನ್ಸ್ಟೇಬಲ್, ಯಲ್ಲಾಲಿಂಗ – ಕಾನ್ಸ್ಟೇಬಲ್ ತ್ವರಿತ ತನಿಖೆಗೆ ಸಂದ ಗೌರವ: ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಪಾಪನಾಶಿನಿ ಹೊಳೆಯಲ್ಲಿ ಅಕ್ರಮ ದನದ ಮಾಂಸ ಪತ್ತೆಯಾದ ಪ್ರಕರಣ ಸೇರಿದಂತೆ, ಹಲವು ಪ್ರಮುಖ ಪ್ರಕರಣಗಳಲ್ಲಿ ಈ ತಂಡವು ದಕ್ಷತೆಯಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸಿಬ್ಬಂದಿಯ ಈ ನಿರಂತರ ಕಾರ್ಯಕ್ಷಮತೆ ಮತ್ತು ತನಿಖಾ ಕೌಶಲವನ್ನು ಗುರುತಿಸಿ, ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್ಪಿ) ಹರಿರಾಮ್ ಶಂಕರ್ ಅವರು ಗೌರವ ಧನ ಹಾಗೂ ಶ್ಲಾಘನಾ ಪತ್ರವನ್ನು ವಿತರಿಸಿ ಅಭಿನಂದಿಸಿದರು. ಪೋಲಿಸ್ ಇಲಾಖೆಯ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲೂ ಶ್ಲಾಘನೆ ವ್ಯಕ್ತವಾಗಿದೆ.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ
