ಶಿರ್ವ: ಜೂ. 21ರಂದು ಬೆಳಿಗ್ಗೆ ಶಿರ್ವ ಸಂತಮೇರಿ ಪದವಿಪೂರ್ವ ಕಾಲೇಜಿನಿಂದ ಶಿರ್ವ ಬಸ್ ಸ್ಟ್ಯಾಂಡ್ ಬಳಿ ಜಾಥಾ ನಡೆಯಿತು. ಜಾಥಾದಲ್ಲಿ ಸುಮಾರು 375 ಕ್ಕೆ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಕಳ ವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ, ಎಸ್ಐ ಲೋಹಿತ್ ಕುಮಾರ್, ಶಿರ್ವ ಆರೋಗ್ಯ ಮಾತ ದೇವಾಲಯದ ಪ್ರಧಾನ ಧರ್ಮ ಗುರುಗಳು ವಂದನೀಯ ಚಾರ್ಲ್ಸ್ ಮಿನೇಜಸ್, ಪ್ರಾಂಶುಪಾಲರಾದ ಜಯಶಂಕರ್ ಕೆ., ಕಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಅರನ್ನ , ಶಿರ್ವ ಪಂಚಾಯತ್ ಸದಸ್ಯ ಹಸನಬ್ಬ ಶೇಕ್, ಕಾಲೇಜಿನ ದೈಹಿಕ ಶಿಕ್ಷಕರಾದ ಜೋಸೆಫ್ ಡಿಸೋಜ, ಶಿರ್ವ ಠಾಣಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.

ಡಿವೈಎಸ್ಪಿ ವಿಜಯಪ್ರಸಾದ್ ರವರು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಬಗ್ಗೆ ಶಿರ್ವ ಪೇಟೆಯಲ್ಲಿ ಅಳವಡಿಸಲಾದ ಫಲಕವನ್ನು ಉದ್ಘಾಟಿಸಿದರು. ನಿಮ್ಮಲ್ಲಿ ಪಿಯುಸಿ ಆದ ವಿದ್ಯಾರ್ಥಿಗಳಿದ್ದಲ್ಲಿ ಪೊಲೀಸ್ ಇಲಾಖೆಯಲ್ಲಿ ಭರ್ತಿ ಆಗಲು ಇದು ಸದಾವಕಾಶ, ಪೊಲೀಸ್ ಇಲಾಖೆಯು ದೇಶದ ಒಳಗೆ ಸೇವೆ ನೀಡುವ ಒಂದು ಇಲಾಖೆ, ನಶೆ ಮುಕ್ತ ಭಾರತವನ್ನು ಮಾಡುವ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದು. ತಮಗೆ ಯಾರು ಮಾದಕ ವ್ಯಸನಕ್ಕೆ ಬಲಿಯಾದವರು ಅಥವಾ ಮಾರುವವರು ಕಂಡು ಬಂದಲ್ಲಿ ಶಿರ್ವ ಠಾಣೆಗೆ ಸಂಪರ್ಕಿಸಬಹುದು, ಹಾಗೂ ನಿಮ್ಮ ಶಾಲೆಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಲಾದ ಕ್ಯೂಆರ್ ಕೋಡ್ ನಲ್ಲಿ ಮಾಹಿತಿಯನ್ನು ಕೊಡಬಹುದು. ತಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಲೋಹಿತ್ ಕುಮಾರ್ ಹಾಗೂ ಪಿಎಸ್ಐ ಅಜ್ಮತ್ ಹಾಲಿ ತುಂಬಾ ಮುತುವರ್ಜಿಯಿಂದ ದಿನದ 24 ಗಂಟೆ ಕೆಲಸ ಮಾಡುತ್ತಿದ್ದು ಅವರ ಸದುಪಯೋಗವನ್ನು ಪಡೆದುಕೊಳ್ಳಿ, ಅವರಲ್ಲಿ ಮುಕ್ತವಾಗಿ ಮಾತನಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಶಿರ್ವ ಚರ್ಚಿನ ಪ್ರಧಾನ ಧರ್ಮ ಗುರುಗಳು ವಂದನೀಯ ಚಾರ್ಲ್ಸ್ ಮಿನೇಜಸ್ ರವರು ಮಾತನಾಡಿ ವಿದ್ಯಾರ್ಥಿಗಳ ಜೀವನದ ಈ ಸಮಯ ಅಮೂಲ್ಯವಾದದು, ಈ ಸಂದರ್ಭದಲ್ಲಿ ಮಾದಕ ವಸ್ತುಗಳು ನಮ್ಮನ್ನು ಆಕರ್ಷಿಸುತ್ತವೆ, ಮಾದಕ ವಸ್ತುಗಳಿಗೆ ಒಂದು ಸಲ ನಾವು ಸಿಕ್ಕಿಹಾಕಿಕೊಂಡರೆ ಅದರಿಂದ ಹೊರಬರಲು ಕಷ್ಟ ಸಾಧ್ಯ, ವಿದ್ಯಾರ್ಥಿ ಜೀವನದಿಂದಲೇ ನಾವು ಮಾದಕ ವಸ್ತುವನ್ನು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡೋಣ. “ನಾವು ನಶಾ ಮುಕ್ತ ಭಾರತವನ್ನು ಕಂಡುಕೊಳ್ಳುವಲ್ಲಿ ಯಾವತ್ತು ನಮ್ಮ ಸಹಕಾರ ಸಮಾಜಕ್ಕೆ ಕೊಡುತ್ತೇವೆ, ಹಾಗೂ ಉತ್ತಮ ಜೀವನವನ್ನು ನಡೆಸಿ ಸ್ವಾಸ್ಥ್ಯ ಭಾರತವನ್ನು ಕಟ್ಟುವಲ್ಲಿ ನಮ್ಮ ಕಂತಿನ ದೇಣಿಗೆಯನ್ನು ನಮ್ಮ ಜೀವನದ ಮುಖಾಂತರ ಯಾವತ್ತೂ ಕೊಡುತ್ತೇವೆ. ಯಾರಾದರೂ ಕೆಟ್ಟ ದಾರಿಯಲ್ಲಿ ನಡೆಯುವುದು ಕಂಡು ಬಂದಲ್ಲಿ ಅವರನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಳ್ಳಲು ನಾವು ನಮ್ಮ ಸಹಕಾರವನ್ನು ನೀಡುತ್ತೇವೆ” ಎಂದು ಪ್ರಮಾಣವಚನವನ್ನು ಬೋಧಿಸಿದರು. ಈ ಜಾಥಾವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗಿ ನಮಗೆ ಎರಡು ವಿಷಯಗಳು ಮಾದಕವಾಗಿ ಪರಿಣಮಿಸುತ್ತವೆ. ಒಂದು ನಶೆ ಇನ್ನೊಂದು ಮೊಬೈಲ್ ಅಥವಾ ಅಂತರ್ಜಾಲ ಇವೆರಡೂ ಕೂಡ ನಿಯಂತ್ರಿಸುವುದು ನಮ್ಮ ಕೈಯಲ್ಲಿದೆ. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಆದಷ್ಟು ಹೆಚ್ಚು ಮಂದಿ ಕರಾವಳಿ ಪ್ರದೇಶದ ಯುವಕರು ಹಾಗೂ ಯುವತಿಯರು ಸೇರಿಕೊಳ್ಳಬೇಕು . ಇವತ್ತಿನ ಈ ಜಾಥಾವನ್ನು ನೆರವೇರಿಸಲು ಸಹಕರಿಸಿದ ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಸಿಬ್ಬಂದಿಗೆ, ಶಿರ್ವ ಪೊಲೀಸ್ ಠಾಣೆಗೆ ಹಾಗೂ ಉಡುಪಿ ಜಿಲ್ಲಾ ಕಾರ್ಕಳ ವಿಭಾಗದ ಡಿವೈಎಸ್ಪಿ ಗೆ, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರು ಅಭಿನಂದನೆ ಸಲ್ಲಿಸಿದರು. ಈ ಜಾಥಾ ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಮಾರ್ಗಸೂಚಿಯನ್ನು ಶಿರ್ವ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಅಡಿಗ ನೆರವೇರಿಸಿದರು.

ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ






