ದಿನಾಂಕ: 30.10.2025 ರಂದು ಕರ್ನಾಟಕ ಬ್ಯಾಂಕ್ ಕಟ್ಟಿಂಗೇರಿ ಶಾಖೆಯ ವ್ಯವಸ್ಥಾಪಕರವರು ನೀಡಿದ ದೂರಿನ ಆಧಾರದ ಮೇಲೆ, ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, 75/2025, 76/2025, 77/2025 U/s. 316(2), 318(4), 3(5) ಬಿಎನ್ಎಸ್ ಅನ್ವಯ ನಾಲ್ಕು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಆರೋಪಿತರು ನಕಲಿ ಚಿನ್ನಾಭರಣಗಳನ್ನು ಅಸಲಿ ಎಂದು ತೋರಿಸಿ ಬ್ಯಾಂಕಿನಿಂದ ಸಾಲ ಪಡೆದು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕಾಪು ವೃತ್ತ ನಿರೀಕ್ಷಕರಾದ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿ ಬೆಂಗಳೂರು, ಗೋವಾ, ಮುಂಬೈ ಹಾಗೂ ದೆಹಲಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಆರೋಪಿತರಾದ
- ಪುನೀತ್ ಆನಂದ ಕೋಟ್ಯಾನ್, ಉಡುಪಿ
- ಸುದೀಪ್, ತೆಂಕನಿಡಿಯೂರು
- ರಂಜನ್ ಕುಮಾರ್, ಏಣಗುಡ್ಡೆ, ಕಾಪು ತಾಲೂಕು
- ಸರ್ವಜೀತ್ ಹೆಚ್.ಕೆ, ಅಲಂಗಾರು, ಪೆರ್ಡೂರು
- ರಾಜೇಶ್ ದೀಲೀಪ್ ಪಾಟೇಲ್, ಪುಣೆ, ಮಹಾರಾಷ್ಟ್ರ
ಇವರನ್ನು ಬಂಧಿಸಿದ್ದಾರೆ.
ಪೊಲೀಸರು ಆರೋಪಿತರಿಂದ ₹4,30,000 ನಗದು, ನಕಲಿ ಹಾಲ್ಮಾರ್ಕ್ ಹಾಕಲು ಬಳಸಿದ ಲೇಸರ್ ಯಂತ್ರ ಹಾಗೂ ಕಂಪ್ಯೂಟರ್ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿತರ ವಿಚಾರಣೆಯಲ್ಲಿ ಅವರು ಬ್ರಹ್ಮಾವರ, ಹಿರಿಯಡ್ಕ ಹಾಗೂ ಉಡುಪಿ ನಗರ ಠಾಣಾ ವ್ಯಾಪ್ತಿಗಳಲ್ಲಿಯೂ ಸಹ ನಕಲಿ ಚಿನ್ನಾಭರಣಗಳ ಅಡಮಾನ ವಂಚನೆ ನಡೆಸಿರುವುದು ಬಹಿರಂಗವಾಗಿದೆ.
ಈ ಕಾರ್ಯಾಚರಣೆ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಐಪಿಎಸ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಶಿರ್ವ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಮರಬದ, ಪಿಎಸ್ಐ ಲೋಹಿತ್ ಕುಮಾರ್ ಸಿ.ಎಸ್., ಪಡುಬಿದ್ರೆ ಪಿಎಸ್ಐ ಅನಿಲ್ ಕುಮಾರ್ ಟಿ ನಾಯ್ಕ್, ಎಎಸ್ಐ ಶ್ರೀಧರ್ ಕೆ.ಜೆ., ಹಾಗೂ ಸಿಬ್ಬಂದಿಗಳಾದ ಕಿಶೋರ್, ಮಂಜುನಾಥ ಅಡಿಗ, ಅರುಣ್, ಸಿದ್ದರಾಯಪ್ಪ, ನಾಗರಾಜ ಮತ್ತು ಪಡುಬಿದ್ರೆ ಸಿಹೆಚ್ಸಿ 68 ನಾಗರಾಜ ಅವರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.
ಉಡುಪಿಯ ನಮ್ಮ ವರದಿಗಾರ,

ವಿಲ್ಸನ್ ಡಿ’ಸೋಜ







